Thursday, June 29, 2017

ಅಣು ಮಹತ್ತಾದ ದೇವ (ರಾಗ - ಭೈರವಿ, ತಾಳ - ಆದಿ)

ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳ
ಗುಣಭರಿತ ಪರಮಪಾವನ ಚರಿತ ಎನ್ನ ನಿರಯಣ
ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬ
ನೆನಹದೊಸಿದಿತ್ತು ಸಲಹೊ

ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿ
ಮಾಡಿರುವ ಪಾತಕವು ವ್ಯಾಧಿರೂಪಗಳಿಂದ
ಪೀಡಿಸುತ ತನುವ ತೊತ್ತುಳಿಗೈದು ನೆಲಕಿಕ್ಕಿ
ತೀಡಿ ಬಸವಳಿದ ಬಳಿಕ
ನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲು
ಓಡಿ ಕಂಠೋಪದಲಿ ಪ್ರಾಣ ನಿಲ್ಲದೆಯೆ
ಒದ್ದಾಡುತಿಹ ಸಮಯದಲಿ ಹರಿನಾಮವನು ಪಾಡಿ
ಪೊಗಳುವುದ ಕರುಣಿಸಯ್ಯ || 1 ||

ಕಂದ ಬಾರೆಂತೆಂದು ಶೋಕಿಪ ಜನಕ ಜನನಿ
ನಿಂದಳುತ ಜ್ಯೇಷ್ಠರು ಕನಿಷ್ಠ ಭ್ರಾತರು ಪುತ್ರ
ಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿ
ಅಂದದಲ್ಲಹ ಮಂದಿರ
ಹೊಂದಿಪ್ಪ ಸಂಪತ್ತ ನೋಡಿ ಹಂಬಲಿಸುತಲಿ
ವೃಂದಾವನಪ್ರಿಯನೆ ನಿನ್ನ ಮರೆತಿದ್ದೆ ಗೋವಿಂದ
ವೈಕುಂಠವಿಭುವಿಂದು ತಾರಿಸುತ ಮು-
ಕುಂದ ಮುಕುತಯನೊದಗಿಸೈ || 2 ||

ಘಾತೀಸೀತನ ಹಿಡಿದು ಹೆಡಗಟ್ಟಿ ಪಂಚಮಹಾ-
ಪಾತಕನ ತೊಗಲನ್ನು ಸುಲಿದು ಸೀಳೆಂಬ ಯಮ-
ದೂತರುದ್ದತ ಕಣ್ಗಳನು ಕಂಡು ಮನದಲ್ಲಿ
ಭೀತಿಯಲಿ ಬಹಳ ಬಳಲಿ
ಚೇತನವು ಕುಂದಿ ನಾಲಗೆ ಬೀಳ್ವ ಸಮಯದಲಿ
ಏತರಾಸೆಯು ಬಾಡದಾದಿಕೇಶವನೇ ಅ-
ನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬ
ಮಾತನಾಡಿಸಿ ಮುಕುತಿಯೊದಗಿಸಯ್ಯ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಂಧಂತಮಸು ಇನ್ನಾರಿಗೆ (ರಾಗ - ಭೈರವಿ, ತಾಳ - ಅಟ)

ಅಂಧಂತಮಸು ಇನ್ನಾರಿಗೆ ಗೋವಿಂದನ
ನಿಂದಿಸುವರಿಗೆ

ಸಂದೇಹವಿಲ್ಲವು ಸಾರಿಸಾರಿಗೆ ವಾಯು-
ನಂದನನ ವಂದಿಸದವರಿಗೆ
ಮಾತುಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ -ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟ ಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಲ್ಲದೆ || 1 ||

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರೊಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುವ ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ || 2 ||

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಅಡಿಗೆಯನು ಮಾಡಬೇಕಣ್ಣ (ರಾಗ - ಪಂತುರಾಳಿ, ತಾಳ - ಛಾಪು) - ಕನಕ ದಾಸರ ಕೀರ್ತನೆಗಳು

ಅಡಿಗೆಯನು ಮಾಡಬೇಕಣ್ಣ ನಾನೀಗ ಸುಜ್ಞಾನದ
ಅಡಿಗಯ ಮಾಡಬೇಕಣ್ಣ

ಅಡಿಗೆಯನು ಮಾಡಬೇಕು ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ

ತನ್ನ ಗುರುವನ್ನು ನೆನೆಯಬೇಕಣ್ಣ ತನುಭಾವವೆಂಬ
ಭಿನ್ನ ಕಲ್ಮಷವಳಿಯಬೇಕಣ್ಣ
ಒನಕೆಯಂದ ಕುಟ್ಟಿ ಕೇರಿ ತನಗೆ ತಾನೆ ಆಗ ಕೆಚ್ಚ
ನನುವರಿತು ಇಕ್ಕಬೇಕಿ ಅರಿವರ್ಗವೆಂಬ ತುಂಟರಳಿಸಿ || 1 ||

ತತ್ವಭಾಂಡವ ತೊಳೆಯಬೇಕಣ್ಣ ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು
ಹತ್ತಿಕೊಂಡಿಹ ಮಮತೆಯನ್ನು ಎತ್ತಿ ಎತ್ತಿ ಎಸರ ಹಿಂಗಿಸುತಲಿ || 2 ||

ಜನನ ಸೊಂಡಿಗೆ ಹುರಿಯಬೇಕಣ್ಣ ನಿಜವಾಗಿ ನಂತು
ತನುವು ತುಪ್ಪವ ಕಾಸಬೇಕಣ್ಣ
ಕನಕಗರಿ ನೆಲೆಯಾದಿಕೇಶವದಾಸ ಕನಕನ ಕಟ್ಟಳೆಯೊಳು
ನಿಂತು ಸುಖದಪಾಕವನು ಚಂದದಿ ಸವಿದುಣ್ಣಸಿಕ್ಕೆ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

ಆನೆಯ ನೋಡಿರಯ್ಯ (ರಾಗ - ಕಲ್ಯಾಣಿ, ತಾಳ - ಅಟ)

ಆನೆಯ ನೋಡಿರಯ್ಯ ನೀವೆಲ್ಲರು
ಆನಂದ ಪಡೆಯಿರಯ್ಯ
ತಾನು ತನ್ನವರೆಂಬ ಮಾನವರ ಸಲಹಿದ

ಪಾಂಡು ಚಕ್ರೇಶನ ಸುತಗೆ ಒಲಿದಾನೆ
ಗಂಡುಗಲಿ ಮಾಗಧನ ಒರಸಿದಾನೆ
ಹಿಂಡು ಗೋವಳರೊಳು ಹಿರಿಯನ ಕಳೆಯದಾನೆ
ಲಂಡರಿಗೆ ಎದೆಗೊಡುವ ಪುಂಡ ಆನೆ || 1 ||

ಬಾಲಕನ ನುಡಿ ಕೇಳಿ ಖಳನ ಸೀಳಿದಾನೆ
ಪಾಲುಂಡು ವಿದುರನ ಸಲಹಿದಾನೆ
ಲೋಲಾಕ್ಷಿಯ ಮಾನಭಂಗಕ್ಕೊದಗಿದಾನೆ
ಖೂಳ ಶಿಶುಪಾಲನ ಸೀಳಿದಾನೆ || 2 ||

ಅಜಮಿಳಗೆ ನಿಜಪದವಿಯ ಕೊಟ್ಟಾನೆ
ಕುಜನರೆಲ್ಲರನು ವರ್ಜಿಸಿದಾನೆ
ಅಜಪಿತ ಕಾಗಿನೆಲೆಯಾದಿಕೇಶವನೆ
ತ್ರಿಜಗವಲ್ಲಭ ತಾನು ಭಜಕರ ವಶದಾನೆ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು