Sunday, August 13, 2017

ಆರೂ ಸಂಗಡ ಬಾಹೋರಿಲ್ಲ ( ರಾಗ - ಮಧ್ಯಮಾವತಿ, ತಾಳ - ಅಟ )

ಆರೂ ಸಂಗಡ ಬಾಹೋರಿಲ್ಲ ಸಿರಿ 
ನಾರಾಯಣನ ಸ್ಮರಣೆ ನೆರೆ ಬಾಹೋದಲ್ಲದೆ ||  ||

ಹೊತ್ತು ನವಮಾಸಪರ್ಯಂತ ಗರ್ಭದೊಳು
ಅತ್ಯಂತ ನೋವು ಬೇನೆಗಳಿಂದಲಿ
ಹೆತ್ತು ತುಪ್ಪವನಿಕ್ಕಿ ಸಲಹಿದ ತಾಯ್ತಂದೆ
ಅತ್ತು ಕರೆದುಳಿವರು ಮತ್ತೆ ಬೆನ್ನಲಿ ಬಾಹರೆ ? ||  ||

ಮನೆಮಕ್ಕಳಿವರೆನ್ನ ತನುವಿಗೊಡೆಯರೆಂದು
ಘನವಾಗಿ ಬಲುನಂಬಿ ನೆಚ್ಚುತಿಹರು
ಅನುಮಾನವಾಗಿ ಜೀವನು ತೊಲಗಿದಾಕ್ಷಣದಿ
ಮನೆಯೊಳೊಂದರೆಗಳಿಗೆ ನಿಲ್ಲಿಸಿಕೊಳ್ಳರೊ ||  ||

ಸುತ್ತಮುತ್ತಲು ಕುಳಿತಿದ್ದ ಬಂಧು ಜನರು
ಹೊತ್ತುಹೋಯಿತೇಳಿರೇಳೆಂಬರು
ಒತ್ತಿದ ಕಸಕಿಂತ ಕಡುಕಷ್ಟದೀ ದೇಹ
ಹೊತ್ತೊಯ್ದು ಅಗ್ನಿಯೊಳು ಬಿಸುಟಿಬಾಹರೊ ||  ||

ಧರೆಮಿತ್ರ ಬುಧಜನರ ಅಗ್ನಿಸಾಕ್ಷಿಯ ಮಾಡಿ
ಕರವಿಡಿದು ಧಾರೆಯನೆರೆಸಿಕೊಂಡ
ತರುಣಿ ತನ್ನಿನಿಯನ ಮುಟ್ಟಲಂಜಿ ದೂರದಲಿ
ಪೊರೆವರು ತನಗಾರು ಪೇಳೆಂಬಳು ||  ||

ಹರಣ ಹಿಂಗದ ಮುನ್ನ ಹರಿಯ ಸೇವೆಯ ಮಾಡು
ಪರಲೋಕಸಾಧನವನು ಮಾಡು
ಕರುಣಿ ಕೃಪಾಳು ಕಾಗಿನೆಲೆಯಾದಿಕೇಶವನ
ಚರಣಕಮಲವ ನಂಬಿ ಸುಖಿಯಾಗು ಮನವೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment