Wednesday, August 30, 2017

ಕೇಶವ ನಾಮ


ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ ನಾಶ ಮಾಡು ಶ್ರೀಶ ಕೇಶವ || ||

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || ||

ಶೋಧಿಸೆನ್ನ ಭವದ ಕಲುಶ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || ||

ಹಿಂದನೇಕ ಯೋನಿಗಳಲಿ ಬಂದು ಬಂದು ನೊಂದೆನಯ್ಯ
ಇಂದು ಭವದ ಬಂಧ ಬಿಡಿಸು ತಂದೆ ಗೋವಿಂದಾ || ||

ಭ್ರಷ್ಟವೆನಿಸಬೇಡ ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ || ||

ಮದನನಯ್ಯ ನಿನ್ನ ಮಹಿಮೆ ವದನದಲ್ಲಿ ನುಡುಯುವಂತೆ
ಹೃದಯದೊಳಗೆ ಹುದುಗಿಸಯ್ಯ ಮಧುಸೂದನಾ || ||

ಕವಿದುಕೊಂಡು ಇರುವ ಪಾಪ ಸವೆದುಪೋಗುವಂತೆ ಮಾಡೊ
ಜವನ ಬಾಧೆಯನ್ನ ಬಿಡಿಸು ಶ್ರೀ ತ್ರಿವಿಕ್ರಮಾ || ||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂತೆ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನಾ || ||

ಮೊದಲು ನಿನ್ನ ಪಾದಪೂಜೆ ಒದಗುವಂತೆ ಮಾಡೊ ಎನ್ನ
ಹೃದಯದಲ್ಲಿ ಸದನ ಮಾಡೊ ಮುದದಿ ಶ್ರೀಧರ || ||

ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದೀರಯ್ಯಾ ಹೃಷೀಕೇಶನೇ || ೧೦ ||

ಬಿದ್ದು ಭವದನೇಕ ಜನುಮ ಬದ್ಧನಾಗಿ ಕಲುಶದಿಂದ
ಗೆದ್ದುಪೋಪ ಬುದ್ಧಿ ತೋರೊ ಪದ್ಮನಾಭನೇ || ೧೧ ||

ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೊ
ಶ್ರೀ ಮಹಾನುಭಾವನಾದ ದಾಮೋದರಾ || ೧೨ ||

ಪಂಕಜಾಕ್ಷ ನೀನು ಎನ್ನ ಮಂಕು ಬುದ್ಧಿಯನ್ನು ಬಿಡಿಸಿ
ಕಿಂಕರನ್ನ ಮಾಡಿಕೊಳ್ಳೊ ಸಂಕರುಷಣಾ || ೧೩ ||

ಏಸು ಜನುಮ ಬಂದರೇನು ದಾಸನಲ್ಲವೇನು ನಾನು
ಘಾಸಿ ಮಾಡದಿರು ಎನ್ನ ವಾಸುದೇವನೇ || ೧೪ ||

ಬುದ್ಧಿ ಶೂನ್ಯನಾಗಿ ಎನ್ನ ಬದ್ಧಕಾರ್ಯಕುಹಕ ಮನವ
ತಿದ್ದಿ ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೇ || ೧೫ ||

ಜನನಿ ಜನಕ ನೀನೆ ಎಂದು ನೆನೆವೆನಯ್ಯ ದೀನಬಂಧು
ಎನಗೆ ಮುಕ್ತಿ ಪಾಲಿಸಯ್ಯ ಅನಿರುದ್ಧನೇ || ೧೬ ||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ವಿರಿಸು ಚರಣದಲ್ಲಿ ಪುರುಷೋತ್ತಮಾ || ೧೭ ||

ಸಾಧುಸಂಗ ಕೊಟ್ಟು ನಿನ್ನ ಪಾದಭಜನೆಯಿಟ್ಟು ಎನ್ನ
ಭೇದ ಮಾಡಿ ನೋಡದಿರೋ ಶ್ರೀ ಅಧೋಕ್ಷಜಾ || ೧೮ ||

ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕುತಿರುವೆ ನಿನಗೆ ನಾರಸಿಂಹನೇ || ೧೯ ||

ಸಂಚಿತಾರ್ಥ ಪಾಪಗಳನು ಕಿಂಚಿತಾದ ಪೀಡೆಗಳನು
ಮುಂಚಿತವಾಗಿ ಕಳೆದು ಪೊರೆಯೊ ಸ್ವಾಮಿ ಅಚ್ಯುತಾ || ೨೦ ||

ಜ್ಞಾನ ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುದ್ಧಿ ಬಿಡಿಸು ಮುನ್ನ ಶ್ರೀ ಜನಾರ್ಧನಾ || ೨೧ ||

ಜಪತಪನುಷ್ಟಾನವಿಲ್ಲದೆ ಕುಪಥಗಾಮಿಯಾದ ಎನ್ನ
ಕೃಪೆಯಮಾಡಿ ಕ್ಷಮಿಸಬೇಕು ಹೇ ಉಪೇಂದ್ರನೇ || ೨೨ ||

ಮೊರೆಯ ಇಡುವೆನಯ್ಯ ನಿನಗೆ ಶರಧಿ ಶಯನ ಶುಭಮತಿಯ
ಇರಿಸು ಭಕ್ತನೆಂದು ಪರಮ ಪುರುಷ ಶ್ರೀ ಹರೀ || ೨೩ ||

ಪುಟ್ಟಿಸಲೇಬೇಡ ಇನ್ನು ಪುಟ್ಟಿಸಿದಕೆ ಪಾಲಿಸೆನ್ನ
ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ೨೪ ||

ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ಥಿಯಿಂದ ಸಲಹುವನು ಕರ್ತೃ ಕೇಶವ || ೨೫ ||

ಮರೆಯದೆಲೆ ಹರಿಯ ನಾಮ ಬರೆದು ಓದಿ ಕೇಳಿದವಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿಕೇಶವಾ || ೨೬ ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment