Sunday, August 13, 2017

ಆರೂ ಸಮಯಕ್ಕೊದಗಲಿಲ್ಲ ( ರಾಗ - ಮುಖಾರಿ, ತಾಳ - ಝಂಪೆ )

ಆರೂ ಸಮಯಕ್ಕೊದಗಲಿಲ್ಲ 
ಮೋರೆ ನೋಡುತ ಸುಮ್ಮನಿಹರೆಲ್ಲ ||  ||

ಮಗಳು ಮಹಲಕುಮಿ ಮೊಮ್ಮಗನು ಸರಸಿಜಭವನು
ಖಗರಾಜವಾಹನನು ತನ್ನಳಿಯನು
ಅಗಜನಂಬು ತನ್ನೊಡಲೊಳಿಂಬಿಟ್ಟು ಮೂ
ರ್ಬೊಗಸೆ ಮಾಡಿದ ಮುನಿಯ ಬಿಡಿಸಲಿಲ್ಲ ||  ||

ಶ್ರೀದೇವಿ ಭೂದೇವಿ ಮಾತೆಯರು ತಾವಿರಲು
ಯಾದವರಾಯ ಮೋಹದ ತಂದೆಯು
ವೇದಮುಖದಣ್ಣನಿರೆ ಉರಿನಯನದಿಂದ ಸ್ಮರ
ಬೂದಿಯಾಗುವಾಗ ಬಿಡಿಸಲಿಲ್ಲವೇಕೆ ? ||  ||

ಪಿತನು ಸಾಗರನು ಹಿತದಕ್ಕೆ ಶ್ರೀದೇವಿ
ಅತಿ ಬೀಗನಾದವ ನಾರಾಯಣ
ಜತೆ ಅಳಿಯರು ಬೊಮ್ಮ ಮನ್ಮಥರಿರಲಾಗಿ
ಕ್ಷತಿಯೊಳಗೆ ಶಶಿ ಕ್ಷೀಣವಾಗುವ ಸಮಯದಿ ||  ||

ತೆತ್ತೀಸಕೋಟಿ ದೇವರ್ಕಳು ತಾವಿರಲು
ಒತ್ತಿನಲಿ ಇಂದ್ರ ಉಪೇಂದ್ರರಿರಲು
ಮತ್ತೆ ಪಾರ್ವತಿ ಪುತ್ರ ವೀರೆಶ ದಕ್ಷನ
ನೆತ್ತಿ ಹರಿಗಡಿವಾಗ ನೋಡುತಿಹರೆಲ್ಲ ||  ||

ಇಂತಿಂಥ ದೊಡ್ಡವರು  ಪಾಡು ಪಡಲಾಗಿ
ಭ್ರಾಂತ ಜನರಿಗೆ ಪೇಳಲಿನ್ನೆಷ್ಟು
ಕಂತು ಪಿತ ಕಾಗಿನೆಲೆಯಾದಿಕೇಶವನ
ಸಂತೋಷದಲಿ ಪಾಡಿ ಸುಖಿಯಾಗೊ ಮನುಜ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment