ಅರಸನಂತೆ ಬಂಟನೊ ಹನುಮರಾಯ
ದೊರೆಯಂತೆ ಸೇವಕನೊ
|| ಪ ||
ಅರಸನಂತೆ ಬಂಟನೆಂಬುದು ನಿನ್ನೊಳು
ಕುರುಹು ತೋರಿತು ಮೂರುಲೋಕಕೆ ಹನುಮ
|| ಅ.ಪ ||
ಒಡೆಯ ಅಂಬುಧಿಯೊಳು ಪೊಕ್ಕು ವೇದವ ತಂದು
ತಡೆಯದೆ ಅಜಗಿತ್ತನೆಂದೆನುತ
ಸಡಗರದಿಂದ ವಾರಿಧಿಯ ದಾಟಿ ಮಹಿಜೆ ಪೆ-
ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ
|| ೧ ||
ಮಂದರಧರ ಗೋವರ್ಧನ ಗಿರಿ ನಲ-
ವಿಂದ ನಿಂದು ನಗೆಹಿದನೆನುತ
ಸಿಂಧುಬಂಧನಕೆ ಸಮಸ್ತ ಪರ್ವತಗಳ೦
ತಂದು ನಳನ ಕೈಯೊಳಗಿತ್ತೆ ಹನುಮ
|| ೨ ||
ಸಿರಿ ಕಾಗಿನೆಲೆಯಾದಿಕೇಶವರಾಯನು
ಸುರರಿಗಮೃತವನು ಎರೆದನೆನುತ
ಮೆರೆವ ಗಿರಿಯವಾಸ ಕಪಿಕುಲಸೌಮಿತ್ರಿ-
ಗೆರೆದ ದ್ರೋಣಾದ್ರಿಸಂಜೀವನ ಹನುಮ
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment