ಅರಿತು ಭಜಿಪರಾರಯ್ಯ ರಂಗಯ್ಯ ನಿನ್ನ
|| ಪ ||
ಸಿರಿದೇವಿಯು ಕಿರುಬೆರಳಲ್ಲಿರುವ ಸೊಬಗನ್ನು
ಅರಿಯಲಾರಳೊ ದೇವ || ಅ.ಪ ||
ಇಂದಿರಾ ದೇವಿಯು ಅರಿಯಲಾರಳು ದೇವ
ಬೃಂದಾರಕರೆಲ್ಲ ನಿಂದು ಯೋಚಿಪರು
ನಂದತೀರ್ಥರ ಮತದೊಳಗೆ ಬಂದವರೆಲ್ಲ
ಎಂದಿಗಾದರೂ ಪರಮಾನಂದ ಪೊಂದುವರು
|| ೧ ||
ಮಾನವರು ಹೀನ ಮಾರ್ಗದೊಳು ಮುಳುಗಿಹರು
ಜ್ಞಾನಿಗಳು ನಿಂದು ಧ್ಯಾನಿಪರು ನಿನ್ನ
ನೀನೆ ದಯಮಾಡಿ ಸಲಹೊ ಎನ್ನನು ಕೃಷ್ಣ
ಕಾನನದೊಳು ಕಣ್ಣು ಮುಚ್ಚಿ ಬಿಟ್ಟಿಹರೊ
|| ೨ ||
ಜಲದೊಳಗಿನ ಕಪ್ಪೆ ಜಲದ ಸವಿಯರಿಯದು
ಜಲದ ಸುಗಂಧವ ಜಲವರಿಯದು
ನೆಲೆಯ ಕಂಡವರ್ಯಾರು ನೆಲೆಯಾದಿಕೇಶವನೆ
ಸುಲಲಿತ ತತ್ವವನು ಸುಲಭ ಮಾರ್ಗದಿ ತೋರೊ
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment