ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆ
ಅರಿಯದಿದ್ದರೆ ನರಕವೇ ಪ್ರಾಪ್ತಿ
|| ಪ ||
ದುರ್ಜನರ ಮನೆಯ ಪಾಯಸಾನ್ನಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡ ಬಲು
ದುರ್ಜನರ ಸಂಗ ಬಲು ಭಂಗ ಹರಿಯೆ
|| ೧ ||
ಭಕ್ತಹೀನರ ಮನೆಯ ಪಟ್ಟ ಸುಪತ್ತಿಗೆಗಿಂತ
ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು
ಮುಕ್ತಿ ಮಾರ್ಗವ ತೋರ್ಪ ಮುರಹರನ ದಾಸರನು
ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ
|| ೨||
ಆಶೆಕಾರರ ಮನೆಯ ವಿಲಾಸ ಸುಖಕ್ಕಿಂತ
ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು
ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ
ಮೀಸಲಿನ ಪಾದಭಜನೆ ಕಡುಲೇಸು ಮನವೆ
|| ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment